ವಿಶೇಷ ಲೇಖನ > ತ.ರಾ. ಸುಬ್ಬರಾಯ (ತ ರಾ ಸು)
 
~ ತ.ರಾ. ಸುಬ್ಬರಾಯ (ತ ರಾ ಸು) ~
 
ಕನ್ನಡದ ಖ್ಯಾತ ಕಾದಂಬರಿಕಾರ ಮತ್ತು ಸಾಹಿತಿ
T.R.Subbarao(TaRaSu)   ತಳುಕು ರಾಮಸ್ವಾಮಯ್ಯ ಸುಬ್ಬರಾಯ ಅವರು ಕನ್ನಡದ ಮೊದಲ ಪ್ರಾಧ್ಯಾಪಕ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಇವರ ಮನೆಮಾತು ತೆಲುಗು. ಇವರ ತಾತ ಸುಬ್ಬಣ್ಣನವರು ೮ ವರ್ಷದವರಾಗಿದ್ದಾಗ ಆಂಧ್ರಪ್ರದೇಶದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು.
ತಂದೆ ರಾಮಸ್ವಾಮಯ್ಯನವರು ಪ್ಲೀಡರ್ ಆಗಿ ಚಿತ್ರದುರ್ಗ ಕೆಲಸ ಮಾಡುತ್ತಿದ್ದರು. ಚಿಕ್ಕಂದಿನಿಂದ ಬಹಳ ತುಂಟರಾಗಿದ್ದ ಸುಬ್ಬರಾಯರು ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅವರು ಬರೆದ ನಾಗರಹಾವು ಚಿತ್ರದ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು.
 
ತರಾಸುರವರಿಗೆ ಗುರುವಾಗಿದ್ದವರು ಅ.ನ. ಕೃಷ್ಣರಾಯರು. ಆ ಸಮಯಕ್ಕಾಗಲೇ ಸಾಮಾಜಿಕ ವಿಷಯಗಳ ಬಗ್ಗೆ ಕಾದಂಬರಿಗಳನ್ನು ಬರೆದಿದ್ದ ಅನಕೃ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಬರಹ ಅವರ ರಕ್ತಕ್ಕೆ ಬಂದಂತಿತ್ತು. ಅವರು ಬರೆದಿದ್ದ ಒಂದು ಕಾದಂಬರಿಯ ವಸ್ತು ಹಿಂದಿ ಭಾಷೆಯ ಚಲನಚಿತ್ರವಾದ 'ಬಸಂತ್ ಬಹಾರ್' ಆಗಿತ್ತು. ಅಲ್ಲಿಯವರೆವಿಗೆ ಅವರು ಕನ್ನಡದ ಹೋರಾಟದಲ್ಲಿ ಅನಕೃ ಮತ್ತಿತರ ಸಹೃದಯರರ ಜೊತೆ ಲೀನವಾಗಿದ್ದರು. ಕನ್ನಡದ ಹೋರಾಟದಲ್ಲಿ ಅನಕೃ ಅವರೊಂದಿಗೆ ಸರಿಸಾಟಿಯಾಗಿ ನಿಂತರು. ಅವರೊಂದಿಗೆ ಕೈ ಜೋಡಿಸಿದವರು ಮ.ರಾಮಮೂರ್ತಿಗಳು. ಆ ಸಮಯದಲ್ಲಿ ರಾಜ್ಯಾದ್ಯಂತ ಓಡಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡಲು ಶ್ರಮಿಸಿದರು.
 
ತರಾಸುರವರು ಕಾದಂಬರಿಗಳನ್ನು ಬರೆದರೂ, ಹಣಗಳಿಕೆಯಲ್ಲಿ ವಿಫಲರಾಗಿದ್ದರು. ೧೯೬೦ರ ಸುಮಾರಿಗೆ ರಷ್ಯಾಗೆ ಸರ್ಕಾರದ ವತಿಯಿಂದ ಹೋದ ಮೇಲೆ ಅವರ ಅದೃಷ್ಟ ಬದಲಾಯಿತು. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು. ಅವರ ಕಾದಂಬರಿ ಆಧರಿಸಿ ಹೆಸರುಗಳಿಸಿದ ಕನ್ನಡದ ಮೊದಲ ಚಿತ್ರ ಚಂದವಳ್ಳಿಯತೋಟ. ನಂತರ ಬಂದದ್ದು ಹಂಸಗೀತೆ. ಆ ವೇಳೆಗಾಗಲೇ ಅವರ ಆರೋಗ್ಯ ಬಹಳವಾಗಿ ಕೆಟ್ಟು ಹೋಗಿತ್ತು. ನಂತರ ಒಂದರ ಹಿಂದೊಂದರಂತೆ ನಾಗರಹಾವು, ಬೆಂಕಿಯ ಬಲೆ, ಗಾಳಿಮಾತು, ಮಸಣದ ಹೂ ಇತ್ಯಾದಿ ಕಾದಂಬರಿಗಳು ಚಲನಚಿತ್ರವಾದುವು. ೧೯೭೦ರ ಸಮಯದಲ್ಲಿ ಶೃಂಗೇರಿ ಸ್ವಾಮಿಗಳ ಸಾನ್ನಿಧ್ಯದ ಪರಿಣಾಮವಾಗಿ ಆರೋಗ್ಯ ಸ್ವಲ್ಪ ಸುಧಾರಿಸಿತು. ಆ ಸಮಯದಲ್ಲಿ ಅವರು ಬರೆದ ಕಾದಂಬರಿ ೪ * ೪ = ೧.
 
ಸಂಬಂಧಿಗಳಲ್ಲೇ ಮದುವೆಯಾಗಿದ್ದ ಅವರ ಪತ್ನಿಯ ಹೆಸರು ಅಂಬುಜ. ಬಹಳ ಸಮಯದ ನಂತರ ಹುಟ್ಟಿದ ಮೂವರು ಮಕ್ಕಳು ನಾಗಪ್ರಸಾದ್, ಪೂರ್ಣಿಮಾ ಮತ್ತು ಪ್ರದೀಪ. ಪತ್ನಿ ಮತ್ತು ಮಕ್ಕಳು ಮೈಸೂರಿನಲ್ಲಿ ವಾಸವಾಗಿದ್ದಾರೆ. ಮೈಸೂರಿನ ಯಾದವಗಿರಿಯಲ್ಲಿ ಕಟ್ಟಿಸಿದ ಅವರ ಮನೆಯ ಹೆಸರು 'ಗಿರಿಕನ್ಯಕಾ'.
 
೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ವರಲಕ್ಷ್ಮಿ ನರ್ಸಿಂಗ್ ಹೋಂಗೆ ಸೇರಿದ್ದವರು ಮತ್ತೆ ಮನೆಗೆ ಬರಲೇ ಇಲ್ಲ.
 
ಅವರ ಕೃತಿಗಳು
ದುರ್ಗಾಸ್ತಮಾನ , ನಾಗರಹಾವು , ಗಾಳಿಮಾತು ..ಇತ್ಯಾದಿ
ಇವರ"ದುರ್ಗಾಸ್ತಮಾನ" ಕೃತಿಗೆ ೧೯೮೫ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
Top
 
~~~~~~~~~~~~~~~~~~